ಕೂಡಲ ಸಂಗಮ ಅಭಿವೃದ್ಧಿ ಮಂಡಳಿ

    ಕಂದಾಯ ಇಲಾಖೆ, ಕರ್ನಾಟಕ ಸರಕಾರ

    ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ

Places Developed by KSDB

ಮಂಡಳಿ ಅಭಿವೃದ್ದಿ ಪಡಿಸಿದ ಸ್ಥಳಗಳು

ಕೂಡಲ ಸಂಗಮ ಅಭಿವೃದ್ಧಿ ಮಂಡಳಿ


 

ಕೂಡಲಸಂಗಮೇಶ್ವರ ದೇವಸ್ಥಾನ

 

 

        ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಸಂಗಮಿಸುವ ಪವಿತ್ರ ಸ್ಥಾನದ ದಡದ ಮೇಲೆ 10 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನವು ಚಾಲುಕ್ಯ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿದೆ. ದೇವಸ್ಥಾನದ ಕಟ್ಟಡಕ್ಕೆ ಉಸುಕು ಮಿಶ್ರಿತ ಗ್ರಾನೈಟ ಕಲ್ಲುಗಳನ್ನು ಬಳಸಲಾಗಿದೆ. ದೇವಸ್ಥಾನವು ಗರ್ಭಗುಡಿ, ಸುಕನಾಶಿ, ನಂದಿಮಂಟಪ ಹಾಗೂ ಕಕ್ಷಾಸನಗಳನ್ನೊಳಗೊಂಡಿದೆ. ನಂದಿಮಂಟಪದ ನಾಲ್ಕು ಬದಿಗಳಲ್ಲಿ ಕಪ್ಪು ವರ್ಣದ ಶಿಲೆಯಲ್ಲಿ ಪ್ರಮಾಣಬದ್ಧವಾಗಿ ಕೆತ್ತನೆ ಮಾಡಿ ನಿಲ್ಲಿಸಿದ ಕಂಭಗಳಿವೆ. ಗರ್ಭಗುಡಿಯಲ್ಲಿ ಉದ್ಭವಲಿಂಗವಿದ್ದು ಸಂಗಮೇಶ್ವರ ದೇವರೆಂದು ಪ್ರಸಿದ್ಧಿ ಹೊಂದಿರುತ್ತದೆ. ಮತ್ತು ಅನಾದಿಕಾಲದಿಂದ ಶೃದ್ಧಾಳು ಭಕ್ತರಿಂದ ಪೂಜೆಗೊಳ್ಳುತ್ತಿದೆ. ಗರ್ಭಗುಡಿಗೆ ಕಲ್ಲಿನ ಚೌಕಟ್ಟಿನ ಬಾಗಿಲು ಹಾಗೂ ಸುಕನಾಶಿಯ ಮುಂಭಾಗದಲ್ಲಿ ಮೇಲೆ ಸುಂದರವಾದ ಮಕರ ತೋರಣ ಕಂಗೊಳಿಸುತ್ತಿದೆ. ದೇವಸ್ಥಾನದ ಮುಂಭಾಗದಲ್ಲಿ ಕುಶಲ ಶಿಲ್ಪಿಗಳಿಂದ ಸುಂದರವಾಗಿ ಕೆತ್ತನೆ ಮಾಡಿ ಕೂಡ್ರಿಸಿದ ಉಬ್ಬು ಶಿಲ್ಪಚಿತ್ರಗಳಿವೆ. ದೇವಸ್ಥಾನದ ಮೇಲ್ಭಾಗದಲ್ಲಿ ಗಾರೆಯಿಂದ ನಿರ್ಮಿತವಾದ ಸುಂದರವಾದ ಗೋಪುರವಿದೆ ಹಾಗೂ ಶಿಖರದ ಮೇಲೆ ಕಳಸವನ್ನಿರಿಸಲಾಗಿದೆ. ಮೇಲ್ಭಾಗದ ಗೋಪುರದ ಸುತ್ತಲೂ 27 ಕಳಸಗಳಿರುತ್ತವೆ. ಹೊರ ಆವರಣದಲ್ಲಿ ಸಿದ್ದೇಶ್ವರ, ನೂರುಂದೇಶ್ವರ, ಗಣಪತಿ, ಆಂಜನೇಯ ಹಾಗೂ ರಾಘವೇಂದ್ರ ಮಠ ಮುಂತಾದ ದೇವಾಲಯಗಳ ಸಮುಚ್ಛಯವಿದೆ. ಪ್ರತಿವರ್ಷ ಚೈತ್ರಮಾಸ ಬಹುಳ ಪಂಚಮಿಯಂದು ಶ್ರೀ ಸಂಗಮೇಶ್ವರ ದೇವರ ಜಾತ್ರೆಯನ್ನು ವಿಜೃಂಭಣೆಯಿಂದ ನೆರವೇರಿಸಲ್ಪಡುತ್ತದೆ. ಜಾತ್ರೆಯ ಅಂಗವಾಗಿ ಹಿಂದಿನ ಒಂಭತ್ತು ದಿನಗಳ ಪರ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಜಾತ್ರೆಯ ದಿನದಂದು ಸಂಜೆ 6-00 ಗಂಟೆಗೆ ರಥೋತ್ಸವು, ಬಂಗಾರದ ಕಳಸದ ಮೆರವಣಿಗೆ, ಪಲ್ಲಕ್ಕಿ ಉತ್ಸವ, ಭಜನೆ ಇತ್ಯಾದಿಗಳನ್ನು ವೈಭವೋಪೇತವಾಗಿ ಆಚರಿಸಲಾಗುತ್ತದೆ. ಕಾರ್ತಿಕಮಾಸದಲ್ಲಿ ದೀಪೋತ್ಸವ, ಶ್ರಾವಣಮಾಸದಲ್ಲಿ ಪ್ರವಚನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಪ್ರತಿವರ್ಷ ಮಕರ ಸಂಕ್ರಾಂತಿ ದಿನದಂದು ಲಕ್ಷಾಂತರ ಜನ ಶೃದ್ಧಾಳು ಭಕ್ತರು ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ತೀರ್ಥಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾಗುತ್ತಾರೆ. ಈ ಸಂದರ್ಭದಲ್ಲಿ ಶರಣಮೇಳ ಸಹ ಜರುಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡುಗಳಿಂದ ಪ್ರವಾಸಿಗರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

 

 

ಚಿಕ್ಕಸಂಗಮ ದೇವಸ್ಥಾನ

 

 

         ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಸಂಗಮದ ಸ್ಥಳವೇ ಚಿಕ್ಕಸಂಗಮ. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿದೆ. ಚಿಕ್ಕಸಂಗಮದ ಶ್ರೀ ಸಂಗಮೇಶ್ವರ ದೇವಸ್ಥಾನ ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿಹೋಗಿದ್ದರಿಂದ ಸರ್ಕಾರದ ಅಧಿಸೂಚನೆ ಸಂಖ್ಯೆ: ಆರ್‍ಡಿ 67 ಆರ್‍ಇಹೆಚ್ 2003 ಬೆಂಗಳೂರು ದಿನಾಂಕ: 9-03-2004 ರನ್ವಯ ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿದ ಕ್ಷೇತ್ರವನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಹೆಚ್ಚುವರಿ ಕ್ಷೇತ್ರವೆಂದು ಸೇರಿಸಲ್ಪಟ್ಟಿದೆ. ಈ ಉದ್ದೇಶಕ್ಕಾಗಿ 6-00 ಎಕರೆ ಭೂಮಿಯನ್ನು ಭೂಸ್ವಾಧೀನಪಡಿಸಿಕೊಂಡು ಹೊಸದಾಗಿ ಸುಂದರವಾದ ದೇವಸ್ಥಾನದ ನಿರ್ಮಿಸಲಾಗಿದೆ.


      ಶ್ರೀ ಸಂಗಮೇಶ್ವರ ದೇವಸ್ಥಾನದ ಸಂಕೀರ್ಣದಲ್ಲಿ ಮುಖ್ಯ ದೇವಸ್ಥಾನ ಹಾಗೂ ಮುಂಭಾಗದ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಆಂಜನೇಯ ದೇವಸ್ಥಾನಗಳನ್ನು, ಪಕ್ಕದ ಎರಡೂ ಬದಿಗಳಲ್ಲಿ ಪೌಳಿಗಳನ್ನು ಹಿಂಭಾಗದಲ್ಲಿ ಯಾತ್ರಿಕರ ವಾಸಕ್ಕಾಗಿ ಕೊಠಡಿಗಳನ್ನು, ಅಡುಗೆ ಕೋಣೆ, ಉಗ್ರಾಣ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ದೇವಸ್ಥಾನದ ಪ್ರಾಂಗಣವನ್ನು ಕಲ್ಲುಗಳ ಹೊದಿಕೆಯಿಂದ ನೆಲಹಾಸುಗೆಯನ್ನು ಮಾಡಿಸಲಾಗಿದೆ. ಮುಂಭಾಗದಲ್ಲಿ 53 ಅಡಿ ಎತ್ತರದ ಸುಂದರವಾದ ಗೋಪುರ ನಿರ್ಮಾಣವಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಭಕ್ತಾಧಿಗಳಿಗೆ ಶೌಚಾಲಯ ಕಟ್ಟಡ ಮತ್ತು ದೇವಸ್ಥಾನದ ಸಂಕೀರ್ಣದಿಂದ 40 ಅಡಿ ಅಗಲದ ಕಾಂಕ್ರೀಟ ಇಳಿಜಾರದ ರಸ್ತೆ. ಹಾಗೂ ಮುಖ್ಯ ರಸ್ತೆಯಿಂದ 3 ಕಿ.ಮಿ. ಉದ್ದಳತೆಯ ರಸ್ತೆ ನಿರ್ಮಾಣ. ಅತಿಥಿ ಗೃಹ, ಮಾರಾಟ ಮಳಿಗೆಗಳ ದೇವಸ್ಥಾನದ ಹಿಂಬದಿಯಲ್ಲಿ ಹೂದೋಟವನ್ನು ಮತ್ತು ವಸತಿ ಗೃಹ ಇತ್ಯಾದಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ.

 

 

ಬಸವನ ಬಾಗೇವಾಡಿ ಶ್ರೀ ಬಸವೇಶ್ವರ ದೇವಸ್ಥಾನ

 


        ಬಸವನ ಬಾಗೇವಾಡಿಯು ವಿಜಯಪುರ ಜಿಲ್ಲೆಯ ತಾಲೂಕು ಕೇಂದ್ರವಾಗಿದೆ. ಸರ್ಕಾರದ ಅಧಿಸೂಚನೆ ಸಂಖ್ಯೆ ಆರ್.ಡಿ-67 ಆರ್‍ಇಹೆಚ್-2003 ದಿನಾಂಕ: 09-03-2004 ರ ಮೂಲಕ ಶ್ರೀ ಬಸವೇಶ್ವರ ದೇವಸ್ಥಾನದ ಸಂಕೀರ್ಣವನ್ನು ಹಾಗೂ ಬಸವ ಸ್ಮಾರಕದ ನಿರ್ಮಾಣ ಸಲುವಾಗಿ ಸ್ವಾಧೀನಪಡಿಸಿಕೊಂಡ ಜಾಗೆಯನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಹೆಚ್ಚುವರಿ ಕ್ಷೇತ್ರವೆಂದು ಸೇರಿಸಿ ಆದೇಶ ಹೊರಡಿಸಿರುತ್ತಾರೆ. ಬಸವೇಶ್ವರ ದೇವಸ್ಥಾನವು ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದ್ದು. ಬಸವೇಶ್ವರ ತಂದೆ ಮಾದರಸರು ಶ್ರೀ ನಂದೀಶ್ವರರ ಪರಮ ಭಕ್ತರಾಗಿದ್ದು, ಅವರ ಆಶೀರ್ವಾದದಿಂದಲೇ ಬಸವೇಶ್ವರರು ಜನ್ಮವೆತ್ತಿದರು ಎಂಬ ಪ್ರತೀತಿ ಇದೆ. ದೇವಸ್ಥಾನ ಕಟ್ಟಡದ ವಿವರ

 

 

ಬಸವ ಸ್ಮಾರಕ ಭವನ

 

 


      ಬಸವ ಸ್ಮಾರಕದ ನಿವೇಶನಕ್ಕಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಭೂಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಶ್ರೀ ಬಸವೇಶ್ವರ ಜನ್ಮಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ನಕ್ಷೆಯ ಪ್ರಕಾರ ವಿವರಗಳು ಕೆಳಗಿನಂತಿವೆ.
ಕಟ್ಟಡಕ್ಕಾಗಿ ಲಭ್ಯವಿರುವ ಸ್ಥಳ 90 ಅಡಿ ಅಗಲ & 113 ಅಡಿ ಅಗಲ. ಕೆಳಂತಸ್ತಿನಲ್ಲಿ ಕಚೇರಿ ಮತ್ತು ಗ್ರಂಥಾಲಯ ಹಾಗೂ 250 ಆಸನಗಳ ವ್ಯವಸ್ಥೆಯುಳ್ಳ ಸಭಾಂಗಣ. ಮೇಲಿನಂತಸ್ತಿನಲ್ಲಿ ವಿಶಾಲವಾದ ಅಷ್ಟಕೋನಾಕೃತಿ ಆಕಾರದ ಹಾಲ್. ಅದರಲ್ಲಿ ಬಸವಣ್ಣನವರ ಬಾಲ್ಯ ಜೀವನ ಕುರಿತಾದ ಮೂರ್ತಿಗಳನ್ನು ವರ್ಣಚಿತ್ರಣಗಳನ್ನು ಬೆಳಕಿನ ಸಂಯೋಜನೆ ಸಹಿತ ಅಳವಡಿಲಾಗಿದೆ. ಹೊರಭಾಗದಲ್ಲಿ ಚಿಕ್ಕ ಉದ್ಯಾನವನ ನಿರ್ಮಿಸಲಾಗಿದೆ. ಸ್ಮಾರಕದ ಸುತ್ತಲೂ ವರಾಂಡ ಇದ್ದು ಚಾಲುಕ್ಯ ಶೈಲಿಯಲ್ಲಿ ಕೆತ್ತಿದ ಗ್ರಾನೈಟ ಕಲ್ಲಿನ ಕಂಬಗಳನ್ನು ಅಳವಡಿಸಲಾಗಿದೆ. ಪ್ರದರ್ಶನ ಸ್ಥಳದ ಛಾವಣಿ 30 ಅಡಿ ಎತ್ತರವಿದ್ದು ವಿಶಿಷ್ಟಾಕಾರದ ಇಳಿಜಾರಾಗಿದ್ದು ಮಧ್ಯದಲ್ಲಿ 36 ಅಡಿ ಎತ್ತರದ ಇಂಡೋಸಾರ್ಸೆನಿಕ್ ಶೈಲಿಯ ಗೋಪುರವಿದ್ದು ಇದರಲ್ಲಿ ದಿನವಿಡಿ ಸೂರ್ಯನ ಬೆಳಕು ಬೀಳಲು ಕಿಂಡಿಗಳನ್ನು ಬಿಡಲಾಗಿದೆ. ನೆಲಹಾಸನ್ನು ಸುಂದರವಾದ ತಿಳಿಗುಲಾಬಿ ಮತ್ತು ಹಾಸನ್ ಗ್ರೀನ ಗ್ರಾನೈಟ ಕಲ್ಲುಗಳಿಂದ ಮಾಡಿಸಲಾಗಿದೆ.
ಅಷ್ಟಕೋನಾಕೃತಿಯ ಕಟ್ಟಡದ ಒಳಭಾಗದಲ್ಲಿ ಏಳು ಗೋಡೆಗಳ ಭಾಗದಲ್ಲಿ ಬಸವೇಶ್ವರರ ಜೀವನದ ಆಯ್ದ ಪ್ರಮುಖ ಘಟನೆಗಳನ್ನು ವಿವರಿಸುವ ಕಂಚಿನ, ಕಲ್ಲಿನ ಹಾಗೂ ಕಟ್ಟಿಗೆಯ 6 ಅಡಿ ಅಗಲದ ಮತ್ತು 4 ಅಡಿ ಎತ್ತರದ ಅಳತೆಯ ಪ್ಯಾನೆಲ್‍ಗಳ ಮೇಲೆ ಕೆಳಗಿನಂತೆ ಕೆತ್ತನೆ ಕೆಲಸ ಮಾಡಿಸಿ ಗೋಡೆಗಳಿಗೆ ಅಳವಡಿಸಲಾಗಿದೆ.


1) ಬಸವೇಶ್ವರರ ತಾಯಿ ಮಾದಲಾಂಬಿಕೆ ಬಸವನ ಬಾಗೇವಾಡಿಯಲ್ಲಿನ ನಂದಿಯನ್ನು ಪೂಜಿಸುವ ದೃಶ್ಯಗವನ್ನು ಸಾಗವಾನಿ ಕಟ್ಟಿಗೆಯ ಪ್ಯಾನೆಲ್ ಮೇಲೆ ಉಬ್ಬು ಚಿತ್ರವನ್ನು ಕೆತ್ತಲಾಗಿದೆ.


2) ಬಾಲಕ ಬಸವಣ್ಣನವರು ಯಜ್ಞಯಾಗಾದಿ ಮತ್ತು ಉಪನಯನವನ್ನು ತಿರಸ್ಕರಿಸುತ್ತಿರುವ ದೃಶ್ಯವನ್ನು ಕಂಚಿನ ಲೋಹದ ಪ್ಯಾನೆಲ್ ಮೇಲೆ ಚಿತ್ರಿಸಲಾಗಿದೆ.

3) ಬಾಲಕ ಬಸವಣ್ಣನವರು ಬಾಗೇವಾಡಿಯಿಂದ ಕೂಡಲಸಂಗಮಕ್ಕೆ ಹೊರಟಿರುವ ದೃಶ್ಯವನ್ನು ಕಲ್ಲಿನ ಪ್ಯಾನೆಲ್ ಮೇಲೆ ಕೆತ್ತಲಾಗಿದೆ.


4) ಬಾಲಕ ಬಸವನು ಕೂಡಲಸಂಗಮದಲ್ಲಿನ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಗುರುಗಳ ಸಮ್ಮುಖದಲ್ಲಿ ನಿಂತು ನಮಸ್ಕರಿಸುತ್ತಿರುವ ದೃಶ್ಯವನ್ನು ಕಲ್ಲಿನ ಪ್ಯಾನೆಲ್ ಮೇಲೆ ಕೆತ್ತಲಾಗಿದೆ.


5) ಬಾಲಕ ಬಸವನು ಗುರುಗಳ ಸಮ್ಮುಖದಲ್ಲಿ ವಿದ್ಯಾಭ್ಯಾಸ ಮಾಡುತ್ತೀರುವ ದೃಶ್ಯವನ್ನು ಕಂಚಿನ ಪ್ಯಾನೆಲ್ ಮೇಲೆ ಕೆತ್ತಲಾಗಿದೆ.


6) ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಬಸವಣ್ಣನು ಗಂಭೀರವಾದ ಚಿಂತನೆಯಲ್ಲಿ ತೊಡಗಿದ್ದು ತನ್ನ ವಿಚಾರಗಳನ್ನು ತಾಳೆಯಗೆರೆಯ ಮೇಲೆ ದಾಖಲಿಸುತ್ತಿರುವ ದೃಶ್ಯವನ್ನು ಗಾಜಿನ ಪ್ಯಾನೆಲ್ ಮೇಲೆ ಉಬ್ಬು ಚಿತ್ತವನ್ನು ಕೆತ್ತಲಾಗಿದೆ.


7) ವಿದ್ಯಾಭ್ಯಾಸ ಮುಗಿಸಿದ ಬಸವಣ್ಣನು ಸೋದರಮಾವನೊಂದಿಗೆ ಮಂಗಳವೇಡೆ ಹೋಗುವ ಪೂರ್ವದಲ್ಲಿ ಅವರ ಆಶೀರ್ವಾದ ಪಡೆಯುವ ದೃಶ್ಯವನ್ನು ಕಂಚಿನ ಪ್ಯಾನೆಲ್ ಮೇಲೆ ಕೆತ್ತಲಾಗಿದೆ.

 

      ಈ ಕಟ್ಟಡದ ಒಳಭಾಗದ ವೃತ್ತಾಕಾರದ ಪೀಠದ ಮೇಲೆ ಬಸವೇಶ್ವರರ ತಾಯಿ ಶಿಸು ಬಸವನನ್ನು ತೊಡೆಯ ಮೇಲಿರಿಸಿಕೊಂಡು ಗುರುಗಳಿಗೆ ತೋರಿಸುತ್ತಿರುವ, ಗುರುಗಳು ಸಿಂಹಾಸನದ ಮೇಲೆ ಆಸೀನರಾಗಿ ಆಶೀರ್ವದಿಸುವ, ಮಾದರಸನೂ ಕೈಮುಗಿದುಕೊಂಡು ನೀತಿರುವ ದೃಶ್ಯಗಳನ್ನು ಕಂಚಿನ ಲೋಹದಲ್ಲಿ ಅತ್ಯಾಕರ್ಷಕವಾಗಿ ತಯಾರಿಸಿದ ಮೂರ್ತಿಗಳನ್ನು ಅಳವಡಿಸಲಾಗಿದೆ.


      ವಿಜಾಪೂರದಿಂದ ಮುದ್ದೇಬಿಹಾಳಕ್ಕೆ ಹೋಗುವ ಮುಖ್ಯ ರಸ್ತೆಯಿಂದ ಸ್ಮಾರಕದ ವರೆಗೆ ದ್ವಿಪಥ ರಸ್ತೆಯನ್ನು ನಿರ್ಮಿಸಲಾಗಿದೆ. ಮುಖ್ಯರಸ್ತೆಯ ಬದಿಯಲ್ಲಿ ಆಕರ್ಷಕವಾದ ಮಹಾದ್ವಾರವನ್ನು ನಿರ್ಮಿಸಲಾಗಿದೆ. ಪ್ರವಾಸಿಗರ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಲಿದ್ದು. ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿನಿವಾಸ, ಶೌಚಾಲಯ, ಸ್ನಾನಗೃಹ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ.

 

 

ಗಂಗಾಂಬಿಕೆ ಐಕ್ಯ ಮಂಟಪ

 

 

      ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಎಂ. ಕೆ. ಹುಬ್ಬಳ್ಳಿಯ ಹತ್ತಿರ ಮಲಪ್ರಭಾ ನದಿಯಲ್ಲಿದ್ದ ಗಂಗಾಂಬಿಕಾ ಐಕ್ಯಸ್ಥಳವನ್ನು ಪುನರನಿರ್ಮಿಸಲಾಗಿದೆ. ಐಕ್ಯಸ್ಥಳದ ಸುತ್ತಲೂ 40 ಅಡಿ ಎತ್ತರದ ಒಣಭಾವಿಯನ್ನು ಮತ್ತು ಸೇತುವೆಯನ್ನು ನಿರ್ಮಿಸಲಾಗಿದೆ. ಒಣಭಾವಿಯಲ್ಲಿ ಒಳಗೆ ಹೋಗಿ ಬರಲು ಎರಡೂ ಬದಿಗಳಲ್ಲಿ ಪಾವಟಿಗೆಗಳನ್ನು ಮೇಲಿನ ಭಾಗದಲ್ಲಿ 60 ಅಡಿ ವ್ಯಾಸದ ಗೋಪುರ ಎರಡು ಹಂತಗಳಲ್ಲಿ ಅಂದರೆ 40 ಅಡಿ ಎತ್ತರದ ಮೇಲೆ ಒಂದು ಹಾಗೂ 53 ಅಡಿ ಎತ್ತರದ ಮೇಲೆ ಒಂದು ಕ್ಯಾಂಟಿಲಿವ್ಹರಗಳನ್ನು ನಿರ್ಮಿಸಲಾಗಿದೆ.
ನದಿಯ ದಡದಿಂದ ಮಣ್ಣು ನೀರಿನಲ್ಲಿ ಕೊಚ್ಚಿ ಹೋಗದಂತೆ ತಡೆಗೋಡೆಯನ್ನು ನಿರ್ಮಿಸಲಾಗಿರುತ್ತದೆ. ಸಂಪರ್ಕ ಸೇತುವೆಗೆ ಗ್ರಾನೈಟ ಕಲ್ಲಿನ ಪ್ಲೋರಿಂಗ ಮತ್ತು ಮೇಲ್ಛಾವಣಿಗೆ ಸ್ಟೇನಲೆಸ್ ಸ್ಟೀಲ್ ಸೀಟ ಹಾಕಲಾಗಿದೆ. ನದಿಯ ದಡದ ಸುತ್ತಲೂ ಸುಂದರವಾದ ಉದ್ಯಾನವನವನ್ನು ನಿರ್ಮಿಸಲಾಗಿದೆ. ಸದರ ಸ್ಥಳವು ರಾಷ್ಟ್ರೀಯ ಹೆದ್ದಾರ ನಂ.4ರಲ್ಲಿರುವುದರಿಂದ ಅಸಂಖ್ಯಾತ ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ.

 

 

 

ಇಂಗಳೇಸ್ವರದ ಮಾದಲಾಂಬಿಕಾ ಸ್ಮಾರಕ ಭವನ

 


        ಇದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಶ್ರೀ ಬಸವೇಶ್ವರರ ತಾಯಿಯ ತವರು ಮನೆಯನ್ನು ಸ್ಮಾರಕವನ್ನಾಗಿ ನಿರ್ಮಿಸಲು ಸರ್ಕಾರಿ ಆದೇಶ ಸಂಖ್ಯೆ ಕಂಇ-231 ಆರ್‍ಇಹೆಚ್-2007 ಬೆಂಗಳೂರು ದಿನಾಂಕ 03-10-2007 ಮತ್ತು 08-10-2007 ರನ್ವಯ ರೂ. 150.00 ಲಕ್ಷ ಬಿಡುಗಡೆಯಾಗಿರುತ್ತದೆ. ಸುಂದರವಾದ ಸ್ಮಾರಕ ಭವನವನ್ನು ನಿರ್ಮಿಸಲಾಗಿದೆ.


      ಕಟ್ಟಡದ ವಿನ್ಯಾಸ 12ನೇ ಶತಮಾನದಲ್ಲಿ ಇದ್ದಂತಹÀ ಸ್ಥಿಥಿವಂತ ಬ್ರಾಹ್ಮಣರ ಮನೆಯ ಶೈಲಿಯಲ್ಲಿರುತ್ತದೆ. ಕಟ್ಟಡದ ಕೆಲಸವನ್ನು ಕೆತ್ತನೆ ಮಾಡಿದ ಕಪ್ಪು ಬಣ್ಣದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಕಟ್ಟಡದ ಕೆಳ ಅಂತಸ್ತಕ್ಕೆ ಕಾಂಕ್ರೀಟ ಮೇಲ್ಛಾವಣಿ ಹಾಕಲಾಗಿದೆ. ಕಟ್ಟಡದ ಒಳಭಾಗದಲ್ಲಿ ಗ್ರನೈಟ ಕಲ್ಲಿನ ಕಂಭಗಳನ್ನು ಕೂಡ್ರಿಸಲಾಗಿದೆ. ಮೇಲ್ಛಾವಣಿಗೆ ಗ್ರನೈಟ ಕಲ್ಲಿನ ತೊಲೆಗಳನ್ನು ಕೂಡ್ರಿಸಲಾಗಿದೆ. ಮುಂಭಾಗದಲ್ಲಿ ಮುಖ್ಯ ದ್ವಾರಕ್ಕೆ ಸಾಗವಾನಿ ಕಟ್ಟಿಗೆಯಲ್ಲಿ ಕೆತ್ತಿದ ಬಾಗಿಲನ್ನು ಕೂಡಿಸಲಾಗಿರುತ್ತದೆ. ಅದರಂತೆ ಕಿಟಕಿಗಳನ್ನು ಕೂಡ್ರಿಸಲಾಗಿದೆ. ಕಟ್ಟಡದ ಸುತ್ತಲು ಕಲ್ಲಿನ ಕಂಪೌಡ ಗೋಡೆಯನ್ನು ನಿರ್ಮಿಸಲಾಗಿದೆ.
ನೀಲಾಂಬಿಕೆ, ಹಡಪದ ಅಪ್ಪಣ್ಣ ಮತ್ತು ಮಡಿವಾಳ ಮಾಚಿದೇವರ ಐಕ್ಯಮಂಟಪ

      ಇವುಗಳು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿಯ ಸಮೀಪ ಬಸವ ಸಾಗರ ಆಣೆಕಟ್ಟೆಯ ಹಿನ್ನೀರಿನಲ್ಲಿ ದಡದಲ್ಲಿದೆ. ದಿನಾಂಕ: 25-6-2006 ರಂದು ಜರುಗಿದ ಕೂಡಲಸಂಗಮ ಅಭಿವೃದ್ಧಿ ಮಂಡಳೀಯ 9 ನೇ ಸಭೆಯಲ್ಲಿ ತಂಗಡಗಿ ಸಮೀಪ ಬಸವ ಸಾಗರ ಹಿನ್ನೀರಿನಲ್ಲಿ ಮುಳುಗಡೆ ಆಗಿರುವ ಶರಣ ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ ಇವರ ದೇವಸ್ಥಾನಗಳನ್ನು ಮತ್ತು ಅಕ್ಕ ನೀಲಾಂಬಿಕೆಯವರ ಐಕ್ಯಮಂಟಪವನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ.


      ಜಲಾಶಯದ ಹಿನ್ನೀರಿನಲ್ಲಿ ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ ದೇವಸ್ಥಾನಗಳನ್ನು ಪುನಃ ಕಟ್ಟಲಾಗಿರುತ್ತದೆ. ನೀಲಾಂಬಿಕೆಯವರ ಗುಡಿ ಸುತ್ತಲಿನ ಗೋಡೆಯನ್ನು ಬಿಚ್ಚಿ ಉಳಿದ ಗುಡಿಗಳಿಗೆ ಹೋಗಿ ಬರಲು ಸಂಪರ್ಕ ಬಾಗಿಲನ್ನು ಮಾಡಿಸಲಾಗಿದೆ. ಅಲಂಕಾರಿಕ ಗೋಪುರಗಳನ್ನು ನಿರ್ಮಿಸಲಾಗಿದೆ. ಮೂರು ಗುಡಿಗಳ ಸುತ್ತಲೂ ಅಷ್ಟಕೋನಾಕೃತಿಯ 30 ಅಡಿ ವ್ಯಾಸವುಳ್ಳ ಹಾಗೂ 40 ಅಡಿ ಎತ್ತರದ ಒಣಭಾವಿಯನ್ನು ನಿರ್ಮಿಸಲಾಗಿದೆ. ಐಕ್ಯಮಂಟಪದ ಮೂರು ಭಾಗಗಳಿಗೆ ಹೋಗಿ ಬರಲು ಸಂಪರ್ಕ ಮೆಟ್ಟಿಲುಗಳಿಗೆ ಗ್ರಾನೈಟ ಕಲ್ಲಿನಿಂದ ನೆಲಹಾಸುಗೆ ಮಾಡಲಾಗಿದೆ. ಸೇತುವೆಯ ಪ್ರವೇಶ ಭಾಗದಿಂದ ಐಕ್ಯಮಂಟಪದವರೆಗಿನ ಸೇತುವೆಯ ಮೇಲ್ಛಾವಣಿಯನ್ನು ಸ್ಟೇನಲೆಸ್ ಸ್ಟೀಲ ಸೀಟಿನಿಂದ ನಿರ್ಮಿಸಲಾಗಿದೆ. ಐಕ್ಯಮಂಟಪದ ಮೇಲ್ಬಾಗದಲ್ಲಿ ಗೋಪುರ ನಿರ್ಮಿಸಲಾಗಿದೆ.